ತಾಮ್ರದ ಸರ್ಪ / Bronze Serpent

 

ತಾಮ್ರದ ಸರ್ಪ 


   ನಮ್ಮನ್ನು ತನ್ನ ರಕ್ತದಿಂದ ಕ್ರಯಕ್ಕೆ ಕೊಂಡುಕೊಂಡ ಯೇಸು ಕ್ರಿಸ್ತನ ನಾಮದಲ್ಲಿ ಎಲ್ಲರಿಗೂ         ವಂದನೆಗಳು .

ಪ್ರಿಯ ದೇವಜನರೇ ಪರಿಶುದ್ಧಾತ್ಮನ ಸಹಾಯದಿಂದ  ಈ ಸಂದೇಶದಲ್ಲಿ ತಾಮ್ರದ ಸರ್ಪ     ವಿಷಯದಲ್ಲಿ ಸಂದೇಶ ಬರೆಯಲು ಪ್ರೇರೇಪಣೆ ಉಳ್ಳವನಾಗಿದ್ದೇನೆ . 

👉 ಹಿನ್ನೆಲೆ :

    ಇಸ್ರಾಯೇಲ್ಯರನ್ನು ಮೋಶೆಯು ಐಗುಪ್ಯದಿಂದ ಕರೆದುಕೊಡು ಬರುವಾಗ ಮಾರ್ಗದುದ್ದಕ್ಕೂ     ಅದ್ಬುತ ರೀತಿಯಲ್ಲಿ ಅವರನ್ನು ನಡೆಸಿದನು. ಆದರೂ ಅವರು  ಪ್ರಯಾಣ ಮಾಡುವಾಗ ಮೋಶೆಗೂ     ದೇವರಿಗೂ ಗುಣುಗುಟ್ಟುತ್ತಲೇ ಇದ್ದರು . ಇದರ ಪರಿಣಾಮ ದೇವರು ಕೋಪಗೊಂಡು ಅವರ ಮದ್ಯದಲ್ಲಿ     ಬೆಂಕಿಯನ್ನುಂಟು ಮಾಡಿದ್ದರಿಂದ ಅವರು ಇಳುಕೊಂಡಿದ್ದ ಪಾಳೆಯದ ಕಡೇ ಭಾಗದವರು ಸುಟ್ಟು      ಹೋದರು . ಆಗ  ಅಲ್ಲಿಯ ಜನರು ಮೋಶೆಯ ಬಳಿಗೆ ಬಂದು ಮೊರೆಯಿಡಲು ಮೋಶೆಯು     ಅವರಿಗಾಗಿ ಪ್ರಾರ್ಥಿಸಲು ಬೆಂಕಿ ಆರಿ ಹೋಯಿತು. (ಅರಣ್ಯಕಾಂಡ :11:01-03)


 ಇದೆ  ಇಸ್ರಾಯೇಲ್ಯರು ಅರಣ್ಯಕಾಂಡ 21 ನೆ ಅಧ್ಯಾಯದಲ್ಲಿ  ಹೋರ್ ಬೆಟ್ಟವನ್ನು ಇಳಿದು     ಅವರಿಗೆ ವಿರುದ್ಧವಾಗಿ ಬಂದ ಅರಾದಿನ  ಅರಸನನ್ನು ಸೋಲಿಸಿ ಅವರ ಜನರನ್ನು ಅವರ     ಗ್ರಾಮಗಳನ್ನು ನಿಶ್ಯೇಷವಾಗಿ  ನಾಶಮಾಡಿಬಿಟ್ಟರು. (ಅರಣ್ಯಕಾಂಡ :21:01-03 ) . ಈ ಸಮಯದಲ್ಲಿಯೂ ಕೂಡ     ಇಸ್ರಾಯೇಲ್ಯರು ಮತ್ತೆ ಬೇಸರವಾಗಿ ಅಪನಂಬಿಕೆಯಿಂದ ದೇವರಿಗೂ ಮೋಶೆಗೂ ವಿರೋಧವಾಗಿ       ಮಾತಾಡುತ್ತಾ , ನೀವು ನಮ್ಮನ್ನು ಈ ಮರಳುಕಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ     ಕರೆದುಕೊಡು ಬಂದಿರೋ ? ಇಲ್ಲಿ ಆಹಾರವು ಇಲ್ಲ ,ನೀರು ಇಲ್ಲ.  ಎಂದು ಮಾತಾಡತೊಡಗಿದರು . 

ಪ್ರಿಯರೆ, ದೇವರು ಇಸ್ರಾಯೇಲ್ಯರಿಗೆ  ಪರಲೋಕದ ಮನ್ನವನ್ನು ಊಟಕ್ಕೆ  ಕೊಟ್ಟು,     ಕುಡಿಯುವುದಕ್ಕೆ ಬಂಡೆಯೊಳಗಿಂದ ನೀರನ್ನು ಕೊಟ್ಟು ಅವರನ್ನು ಪೋಷಿಸುತ್ತಾ ಸಂರಕ್ಷಿಸುತ್ತಾ     ಮೇಘಸ್ತಂಭವೂ ಅಗ್ನಿಸ್ತಂಭವೂ ಆಗಿ ಕಾಪಾಡುತ್ತಾ  ಬಂದರೂ  ಅವರು ದೇವರನ್ನು ಆತನ     ಉಪಕಾರವನ್ನು ಮರೆತು ಅಪನಂಬಿಕೆಯಿಂದ ಗುಣಗುಟ್ಟುವವರಾದರು . ಅನೇಕ ಸಾರಿ ಕ್ರೈಸ್ತ     ವಿಶ್ವಾಸಿಗಳಾದ ನಾವು ಕೂಡ ಕರ್ತನು ನಮ್ಮನ್ನು ಈ ದಿನದವರೆಗೂ ಪೋಷಿಸಿ ಕಾಪಾಡಿದ್ದನ್ನು     ಮರೆಯುತ್ತೇವೆ. ಇತ್ತೀಚಿಗೆ ಕೊರೊನ ದಿನಗಳಲ್ಲಂತು ಸಭೆಗಳು ಸರ್ಕಾರದ ನಿಯಮದಂತೆ         ಮುಚ್ಚಲ್ಪಟ್ಟಾಗ ಸಭೆಗಳಲ್ಲಿ ಯಾವ ವಾಕ್ಯ ಬೋಧನೆಗಳು ಇಲ್ಲದೆ  ನಾವೆಲ್ಲರೂ ಆತ್ಮೀಕವಾಗಿ     ಕುಗ್ಗಿಹೋದೆವು . ಆ ದಿನಗಳ ಪರಿಣಾಮ ಅನೇಕರು ಸಭೆಗೆ ಬರುವುದನ್ನು ಕೂಡ ಬಿಟ್ಟರು. ಈ ಸಂದೇಶ     ಓದುತ್ತಿರುವ ನನ್ನ ಪ್ರಿಯ ದೇವಜನರೇ ಆದರೂ ನಾವು ಈ ದಿನ ಬದುಕಿ ಉಳಿದಿದ್ದೇವೆ ಕಾರಣ     ಕರ್ತನಾದ ಯೇಸುವಿನ ಕೃಪೆ ನಮ್ಮೆಲ್ಲರ ಮೇಲೆ ಇರುವುದರಿಂದಲೆ  .  ಹಾಗಾದರೆ ನಾವು ಇಸ್ರಾಯೇಲ್ಯರ     ಹಾಗೆ ಗುಣುಗುಟ್ಟದೆ ಇರೋಣ . 


 👉  ಪರಿಣಾಮ :

 ಈ ಇಸ್ರಾಯೇಲ್ಯರು ದೇವರ ವಿರುದ್ಧ ಮಾತಾಡಿದ್ದಕ್ಕಾಗಿ ದೇವರು ಸರ್ಪಗಳನ್ನು(ಉರಿಮಂಡಲ-     ಮರಳಿನಲ್ಲಿ ಇರುವ ಸರ್ಪಗಳ ಕಡಿತ ಉರಿಯುವುದು) ಅವರ ಬಳಿ ಕಳುಹಿಸಿದನು . ಅವು ಜನರನ್ನು     ಕಚ್ಚಿದ್ದರಿಂದ ಅನೇಕರು ಸತ್ತರು ಮತ್ತು ಸಾಯುತ್ತಲಿದ್ದರು . ಆಗ ಜನರು ಮೋಶೆಯ ಬಳಿ ಬಂದು     ದೇವರಿಗೆ ಪ್ರಾರ್ಥಿಸಬೇಕೆಂದು ಕೇಳಿದಾಗ ದೇವರು ಮೋಶೆಗೆ ವಿಷಸರ್ಪದ ಆಕಾರವನ್ನು ತಾಮ್ರದಿಂದ     ಮಾಡಿ ಧ್ವಜಸ್ತಂಭದ ಮೇಲೆ ಎತ್ತರದಲ್ಲಿ ಇಡಲು ಹೇಳಿದನು. ಯಾರು ಸರ್ಪಗಳಿಂದ ಕಚ್ಚಿಸಿಕೊಂಡು     ಗಾಯಪಟ್ಟಿರುತ್ತಾರೊ ಅವರು ಎತ್ತರದಲ್ಲಿ ಇಡಲ್ಪಟ್ಟ ಆ ತಾಮ್ರದ ಸರ್ಪವನ್ನು ನೋಡಿ     ಬದುಕಿಕೊಳ್ಳುವರು ಎಂದನು. ಹಾಗೆಯೆ ಮೋಶೆ ಮಾಡಿದಾಗ ಸರ್ಪಗಳಿಂದ ಕಚ್ಚಲ್ಪಟ್ಟ ಜನರಲ್ಲಿ     ಯಾರು ಆ ತಾಮ್ರದ ಸರ್ಪವನ್ನು ಲಕ್ಷವಿಟ್ಟು ನೋಡಿದರೋ ಅವರೆಲ್ಲರೂ ಜೀವ ಉಳಿಸಿಕೊಂಡರು. (     ಅರಣ್ಯಕಾಂಡ :21:4-9)  






👉 ಪರಿಹಾರ :

ಪ್ರಿಯರೆ ಜನರು ಉಳಿಯುವದಕ್ಕಾಗಿ ಅಲ್ಲಿ ದೇವರು ಯಾವ ಔಷಧಿಯನ್ನು, ಯಾವುದೇ     ಗಿಡಮೂಲಿಕೆಯನ್ನು ಕೊಡಲಿಲ್ಲ. ಆ ಇಸ್ರಾಯೇಲ್ಯರು ತಮ್ಮ ಪ್ರಾಣ ಉಳಿಯುದಕ್ಕೆ ಯಾವ ದೊಡ್ಡ     ಕಾರ್ಯಮಾಡಬೇಕಾಗಿರಲಿಲ್ಲ . ತಲೆಯೆತ್ತಿ ನಂಬಿಕೆಯಿಂದ ಸರ್ಪದ ಆಕಾರವನ್ನು ನಂಬಿಕೆಯಿಂದ     ನೋಡುವುದು ಮಾತ್ರವೆ . ಅಲ್ಲಿ ಸಾಯುತ್ತಿರುವವರಲ್ಲಿ “ಇದೇನು ಮೋಶೆ ಬರಿ ನೋಡಲು     ಹೇಳುತ್ತಿದ್ದಾನೆ !!  ಬರಿ ನೋಡಿದರೆ ಬದುಕುತ್ತೇನೋ” ಎಂದು ಪ್ರಶ್ನಿಸಿರಬಹುದು ಆದರೂ     ನೋಡಿದವರೆಲ್ಲರೂ  ಉಳಿದರು , ಕೆಲವರು ಇದೇನು ಎಷ್ಟು ಸುಲಭದ ಕೆಲಸ ಅಂದು ನೋಡಿದವರು     ಕೂಡ ಉಳಿದರು . ಆದರೆ ಯಾವ ವ್ಯಕ್ತಿ ಸರ್ಪದಿಂದ ಕಚ್ಚಲ್ಪಟ್ಟಿದ್ದನೋ ಅವನೇ ತನಗಾಗಿ ಆ ಸರ್ಪದ     ಆಕಾರವನ್ನು ನೋಡಬೇಕಾಗಿತ್ತು .  ಗಾಯ ಹೊಂದಿದ ವ್ಯಕ್ತಿಗೆ ಬದಲಾಗಿ ಬೇರೆ ಯಾರೇ ನೋಡಿದರೂ     ಆ ವ್ಯಕ್ತಿ ಉಳಿಯುತ್ತಿರಲಿಲ್ಲ . ಯಾಕೆ ದೇವರು ಜನರ ಸಾವಿಗೆ ಕಾರಣವಾದ ಸರ್ಪದ ಮೂರ್ತಿಯನ್ನೇ     ಎತ್ತರದಲ್ಲಿಡಲು  ಹೇಳಿದನು . ಯಾಕೆಂದರೆ ಅವರು ಮಾಡಿದ ಪಾಪದ ದೆಸೆಯಿಂದ ಅವರಿಗೆ ಅಂತಹ     ಮರಣ ಉಂಟಾಗಿತ್ತು . 




ಮನುಷ್ಯನು ಕೂಡ ಪಾಪವೆಂಬ ಸರ್ಪದಿಂದ ಕಚ್ಚಲ್ಪಟ್ಟು ಒಂದು ದಿನ ಸತ್ತು     ನ್ಯಾಯತೀರ್ಪನ್ನು ಎದುರಿಸುವವನಿದ್ದಾನೆ (ಇಬ್ರಿಯ:9:27), ನಾವು ಕೂಡ ಜನ್ಮದಿಂದ ಪಾಪವೆಂಬ     ಸರ್ಪದಿಂದ ಕಚ್ಚಲ್ಪಟ್ಟಿದ್ದೇವೆ. ಆದರೆ  ಯೇಸು ನಮಗಾಗಿ ಪಾಪಸ್ವರೂಪನಾಗಿ ಶಿಲುಬೆಯ ಮೇಲೆ      ನೇತುಹಾಕಲ್ಪಟ್ಟನು(2 ಕೊರಿಂಥ :5:21,ಯೋಹಾನ : 03:14) . ಇಸ್ರಾಯೇಲ್ಯರು ಉಳಿಯಲು     ಎತ್ತರದಲ್ಲಿದ್ದ ತಾಮ್ರದ ಸರ್ಪವನ್ನು ನೋಡುವುದು ಅವಶ್ಯವಾಗಿತ್ತು ,  ಆದಿಯಲ್ಲಿ ಪಾಪ ಮತ್ತು     ಮರಣ ಮನುಷ್ಯನಿಗೆ ಬಂದಿದ್ದು ಮನುಷ್ಯನ ನೋಟದಿಂದಲೇ (ಆದಿ :3:6).  ಹಾಗೆಯೆ ಮನುಷ್ಯನಿಗೆ     ಪಾಪ ಮತ್ತು ಮರಣದಿಂದ ಬಿಡುಗಡೆಯು ಕೂಡ ಅವನ ನೋಟದಿಂದಲೇ (ಯೆಶಾಯ : 45:22).     ಆದ್ದರಿಂದ ನಾವು ಕೂಡ ನಮಗಾಗಿ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ನೋಡುವುದು ಅವಶ್ಯವಾಗಿದೆ ,     ಯಾರು ಶಿಲುಬೆಯ ಮೇಲಿರುವ ಯೇಸು ಕ್ರಿಸ್ತನನ್ನು ನಂಬಿಕೆಯಿಂದ  ನೋಡಿ ವಿಶ್ವಾಸವಿಡುತ್ತಾರೋ     ಅವರು ರಕ್ಷಿಸಲ್ಪಟ್ಟು ನಿತ್ಯಜೀವವನ್ನು ಹೊಂದುತ್ತಾರೆ .  




  
 ಪ್ರಿಯರೆ ಆ ಇಸ್ರಾಯೇಲ್ಯರಾದರೋ ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಲಕ್ಷವಿಟ್ಟು     ನೋಡಿ ಶಾರೀರಿಕ ಮರಣದಿಂದ ಪಾರಾದರು , ಆದರೆ ಪಾಪಿಗಳಿಗಾಗಿ ಶಿಲುಬೆಗೆ ಹಾಕಲ್ಪಟ್ಟ     ಯೇಸುಕ್ರಿಸ್ತನನ್ನು ಲಕ್ಷವಿಟ್ಟು ನೋಡುವವರು ಶಾಶ್ವತ ಮರಣದಿಂದ ಪಾರಾಗುತ್ತಾರೆ. 

   👉 ಕ್ರಿಸ್ತೀಯ ಮೂಢನಂಬಿಕೆ :

ಆದರೂ ಸೈತಾನನು ಮನುಷ್ಯರನ್ನು  ಹೇಗೆ  ಮೂರ್ಖರನ್ನಾಗಿ ಮಾಡುತ್ತಾನೆಂದರೆ ಬಹಳ     ವರ್ಷದ  ನಂತರ ಆ  ಮೋಶೆ ಮಾಡಿದ ಆ ತಾಮ್ರದ ಸರ್ಪವನ್ನು ಅವರು ಆ ಸಮಯದಲ್ಲಿ ಮಾತ್ರ     ಉಪಯೋಗಿಸದೆ ಅದನ್ನು ಪೂಜಿಸುತ್ತಾ “ನೆಹುಷ್ಟಾನ್” ಎಂದು ಹೆಸರಿಟ್ಟು ಧೂಪ ಹಾಕುತ್ತಾ     ಇರುತ್ತಾರೆ (2 ಅರಸು:18:4). ದೇವರು “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು.     ಆಕಾಶದಲ್ಲಾಗಲಿ ಭೂವಿುಯಲ್ಲಾಗಲಿ ಭೂವಿುಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ     ರೂಪವನ್ನೂ ಮಾಡಿಕೊಳ್ಳಬಾರದು.

     ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ ” ಎಂದು ಹೇಳಿದ್ದರೂ ಅವರು ಅದನ್ನು ಮರೆತರು (ವಿಮೋ :20:4-5). ಪ್ರಿಯರೆ 

    ಅವರನ್ನು ಉಳಿಸಿದ್ದು ಆ ಮೂರ್ತಿಯಲ್ಲ ಆದರೆ ಸೈತಾನನು ಅವರನ್ನು ಪ್ರೇರೇಪಿಸಿದನು , ಈಗಿನ     ದಿನಗಳಲ್ಲಿಯೂ ಕೂಡ ವಿಶ್ವಾಸಿಗಳು ಪ್ರಾರ್ಥಿಸಿದ ಎಣ್ಣೆ, ನೀರು, ಮನುಷ್ಯ  ಇತ್ಯಾದಿಗಳನ್ನು ವಿಗ್ರಹದ     ರೂಪದಲ್ಲಿ ಅವುಗಳ ಮೇಲೆ ನಂಬಿಕೆಯಿಟ್ಟು ಆತ್ಮಸ್ವರೂಪನಾದ ಕರ್ತನನ್ನು ಮರೆಯುತ್ತಾರೆ .   


ಅಂದರೆ ದೇವರು ತನ್ನ ಮಕ್ಕಳ ಒಳಿತಿಗಾಗಿ  ಉಪಯೋಗಿಸಿದ ವಸ್ತುಗಳನ್ನೂ, ಮನುಷ್ಯರನ್ನು     ಸೈತಾನನು ಜನರ ಮತ್ತು ವಿಶ್ವಾಸಿಗಳ ಹೃದಯದಲ್ಲಿ ವಿಗ್ರಹಗಳನ್ನಾಗಿ ರೂಪಿಸಿ  ದೇವರ     ಮಹಿಮೆಯನ್ನು ಬೇರೆಯವರಿಗೆ ಕೊಡುವ ಹಾಗೆ ಮಾಡುತ್ತಾನೆ . ಈಗಿನ ದಿನಗಳಲ್ಲಿ ಅನೇಕ ಸೇವಕರು     ತಮಗೆ ಕರ್ತನು ಕೊಟ್ಟ ವರಗಳಿಂದ ಅದ್ಭುತಗಳನ್ನು ಮಾಡಿ ಜನರ ಮತ್ತು ವಿಶ್ವಾಸಿಗಳ ಮುಂದೆ “ಈ     ಅದ್ಭುತ, ಚಮತ್ಕಾರ , ಸ್ವಸ್ತತೆಗಳನ್ನು ನಾನು ಮಾಡಿದ್ದು “ ಎಂದು ಹೇಳಿ ಕರ್ತನ ಮಹಿಮೆಯನ್ನು     ಕಸಿದುಕೊಳ್ಳುವವರಾಗಿದ್ದಾರೆ . ಹೀಗೆ ಎಲ್ಲರನ್ನುಮರಳು ಮಾಡುವುದು ಸೈತಾನನಿಗೆ ಸುಲಭವೂ ಕೂಡ     ಆಗಿದೆ .     "ಯಾವುದನ್ನು ನಾವು  ದೇವರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇವೋ ಅದು ವಿಗ್ರಹವೇ ಆಗಿದೆ "    ಆದರೆ     ಸತ್ಯದೇವರನ್ನು ಅರಿತ ನಾವುಗಳು ಹಾಗೆ ಮಾಡದೆ ವಾಕ್ಯದ ಗೂಢಾರ್ಥಗಳನ್ನು ಅರಿತು     ಆತ್ಮೀಕವಾಗಿ  ಬೆಳೆದು ಬೇರೆಯವರನ್ನು ಬಲಪಡಿಸುವುದು ಅನಿವಾರ್ಯವಾಗಿದೆ .  

            ಇನ್ನು ಹೆಚ್ಚಿನ ಆತ್ಮೀಯ ಸತ್ಯಗಳನ್ನು ದೇವರು ತನ್ನ ಪವಿತ್ರಾತ್ಮನ ಸಹಾಯದಿಂದ ನಿಮಗೆ                              ತಿಳಿಯಪಡಿಸಲಿ .


 


ಈ ಸಂದೇಶ ಓದಿದ ಪ್ರಿಯ ದೇವಜನರೆಲ್ಲರಿಗೂ ವಂದನೆಗಳು. ನಿಮ್ಮ ಸ್ನೇಹಿತರಿಗೂ ಈ ಸಂದೇಶವನ್ನು ಶೇರ್ ಮಾಡಿ........

                                                                             -By Prabhu

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು